ರಾಷ್ಟ್ರದ ಪ್ರಗತಿಯನ್ನು GDP ಯಿಂದ ಮಾತ್ರವಲ್ಲ, ಆ ದೇಶ ತನ್ನ ನಾಗರಿಕನನ್ನು ಘನತೆಯಿಂದ ನಡೆಸಿಕೊಳ್ಳುವ ಮತ್ತು ಮತ್ತು ಪ್ರತಿಯೊಬ್ಬ ಪ್ರಜೆಯೂ ಎಷ್ಟು civilize ಆಗಿದ್ದಾನೆ, ಎಷ್ಟು ನಾಗರಿಕನಾಗಿದ್ದಾನೆ ಎನ್ನವುದರ ಮೇಲೂ ಅಳೆಯಲಾಗುತ್ತದೆ: ಕೆವಿಪಿ ಅಭಿಮತ
A nation's progress is measured not only by GDP,


ಗಣರಾಜ್ಯಗಳ ಅಧಿಪತಿ ಭಾರತ ಎಂದು ನಾವು ಹೆಮ್ಮೆ ಪಡುವಾಗ ನಮಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆಯೂ ಹೆಮ್ಮೆ ಇರಬೇಕು: ಕೆ.ವಿ.ಪ್ರಭಾಕರ್ ಹುತಾತ್ಮರ ಕನಸು ನನಸು ಮಾಡುವ ಕನಸು ನಿಮ್ಮದಾಗಲಿ: ಕೆವಿಪಿ ಕರೆ
ಮಂಗಳೂರು ಜ26: ಗಣರಾಜ್ಯಗಳ ಅಧಿಪತಿ ಭಾರತ ಎಂದು ನಾವು ಹೆಮ್ಮೆ ಪಡುವಾಗ ನಮಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆಯೂ ಹೆಮ್ಮೆ ಇರಬೇಕು. ಹುತಾತ್ಮರ ಕನಸು ನನಸು ಮಾಡುವ ಕನಸು ನಿಮ್ಮದಾದಾಗ ಮಾತ್ರ ಹುತಾತ್ಮರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವ ವಿದ್ಯಾಲಯ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಇಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಈ ದೇಶದ ನಾಳೆಯ Architect ಗಳು ಮಾತ್ರವಲ್ಲ. ನಿಮ್ಮ ಬದುಕು ಮತ್ತು ಭವಿಷ್ಯದ Architect ಗಳೂ ಹೌದು. ನಿಮ್ಮ ಭವಿಷ್ಯದ ವಾಸ್ತುಶಿಲ್ಪಿಗಳಾಗುವುದು ಮತ್ತು ದೇಶದ ಭವಿಷ್ಯದ ವಾಸ್ತು ಶಿಲ್ಪಿಗಳಾಗುವುದು ಎರಡೂ ಬೇರೆ ಬೇರೆ ಸಂಗತಿಗಳಲ್ಲ. ಇವರೆಡರ ನಡುವೆ ಪರಸ್ಪರತೆ ಇದೆ ಎಂದರು.

ಕಾಲೇಜು ವಿದ್ಯಾರ್ಥಿಗಳು ಜನವರಿ 26 ಅಂದರೆ, ಒಂದು ಸರ್ಕಾರಿ ರಜಾ ದಿನ ಅಂತ ಮಾತ್ರ ಖುಷಿ ಪಡಬಾರದು. ಅದರಲ್ಲೂ ಈ ಬಾರಿಯ ಗಣರಾಜ್ಯೋತ್ಸವವನ್ನು “Long week end” ಎಂದು ಸಂಭ್ರಮ ಪಡುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದರು. ಈ ತ್ರಿವರ್ಣ ಧ್ವಜವನ್ನು ನೋಡಿದಾಗ ನಮಗೆ ಥ್ರಿಲ್ ಆಗತ್ತೆ. ರೋಮಾಂಚನ ಆಗತ್ತೆ. ಈ ರೋಮಾಂಚನದ ಹಿಂದೆ ನಮ್ಮ ಹಿರಿಯರ ಹೋರಾಟ, ತ್ಯಾಗ, ಬಲಿದಾನದ ಸುದೀರ್ಘ ಚರಿತ್ರೆಯೇ ಇದೆ. ಇವರೆಲ್ಲರ ಬಲಿದಾನದ ಹಿಂದೆ ಒಂದು ಕನಸಿತ್ತು.
ಸ್ವತಂತ್ರ ಮತ್ತು ಸದೃಡ ಹಾಗೂ ಸರ್ವಧರ್ಮ ಸಮನ್ವಯದ ಭಾರತವನ್ನು ಕಟ್ಟಿ ನಿಲ್ಲಿಸುವ ಗಟ್ಟಿ ಕನಸಿತ್ತು. ನಮ್ಮ ಹಿರಿಯರು ಈ ಕನಸನ್ನು ಸ್ವತಂತ್ರ ಭಾರತದ ಯುವಕ/ ಯುವತಿಯರ ಅಂಗೈಗಳಿಗೆ ಕೊಟ್ಟು ಅವರು ಹುತಾತ್ಮರಾಗಿದ್ದಾರೆ. ಈ ಕನಸನ್ನು ನನಸು ಮಾಡಬೇಕಾದವರು “long week end”ಗಳಲ್ಲಿ ಕಳೆದು ಹೋಗುವುದು ಬೇಸರದ ಸಂಗತಿ ತಾನೇ ? ಎಂದು ಪ್ರಶ್ನಿಸಿದ ಅವರು ಹುತಾತ್ಮರ ಕನಸನ್ನು ನನಸು ಮಾಡುವಭಾರತಕ್ಕೆ ಕನಸು ನಮ್ಮದಾಗಲಿ ಎಂದು ಕರೆ ನೀಡಿದರು.
1950 ಜನವರಿ 26 ಸ್ವತಂತ್ರ ಭಾರತ ಗಣರಾಜ್ಯವಾಗಿ ಪುನರ್ ಪ್ರತಿಷ್ಠಾಪನೆಯಾದ ದಿನ. ಗಣಗಳ ಅಧಿಪತಿಯನ್ನು ಗಣಪತಿ ಎಂದು ಕರೆಯುತ್ತೇವೆ. ಹಾಗೆಯೇ ಗಣರಾಜ್ಯಗಳ ಅಧಿಪತಿ ಭಾರತ. ಸ್ವತಂತ್ರ ಭಾರತಕ್ಕೆ ಗಟ್ಟಿ ಸಂವಿಧಾನದ ಮುದ್ರೆ ಬಿದ್ದು Rule of Law ಅಂದರೆ ಕಾನೂನೀ ಆಡಳಿತ ಜಾರಿಯಾದ ದಿನ ಕೂಡ ಹೌದು. ನಮ್ಮ ಸಂವಿಧಾನ ಕೇವಲ ಕಾನೂನು ಪಠ್ಯವಲ್ಲ; ಇದು ಪ್ರತಿಯೊಬ್ಬ ಭಾರತೀಯನ ಪ್ರಥಮ User Manual ಅಂದರೆ “ಕೈಪಿಡಿ” ಆಗಿದೆ ಎಂದು ವಿವರಿಸಿದರು.
ಸಂವಿಧಾನ ನಮಗೆ ಮಾತನಾಡುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಕನಸು ಕಾಣುವ ಮತ್ತು ನಾವು ಯಾರೆಂದು ನಿಖರವಾಗಿ ಹೇಳುವ ಹಕ್ಕನ್ನು ನೀಡುತ್ತದೆ.
ಕಾಲೇಜು ವಿದ್ಯಾರ್ಥಿಗಳಾದ ನೀವು ನಿಮ್ಮ ಜೀವನದ ಅತ್ಯಂತ ಶಕ್ತಿಶಾಲಿ ಮತ್ತು ನಿರ್ಣಾಯಕ ಹಂತದಲ್ಲಿದ್ದೀರಿ. ಹಳತಾದ ವ್ಯವಸ್ಥೆಗಳನ್ನು ಪ್ರಶ್ನಿಸುವ ಕುತೂಹಲದ ಜೊತೆಗೆ, ಬದಲಾವಣೆಯನ್ನು ಒತ್ತಾಯಿಸುವ ಮತ್ತು ರೂಪಿಸುವ ಶಕ್ತಿ ನಿಮಗಿದೆ. ಸೆಕೆಂಡುಗಳಲ್ಲಿ ಪ್ರಪಂಚದಾದ್ಯಂತ ನಿಮ್ಮ ಧ್ವನಿಯನ್ನು ಹರಡುವ ತಂತ್ರಜ್ಞಾನ ನಿಮ್ಮ ಅಂಗೈಯಲ್ಲಿದೆ. ಗಣರಾಜ್ಯವು ನಮ್ಮ ನಾಗರಿಕರ ಪಾಲ್ಗೊಳ್ಳುವಿಕೆಯಿಂದಷ್ಟೇ ಪ್ರಬಲವಾಗುತ್ತದೆ ಎನ್ನುವುದನ್ನು ಅರಿತು ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು. ಪ್ರಜಾಪ್ರಭುತ್ವ ಅಂದರೆ ನಾವು ಪ್ರೇಕ್ಷಕರಾಗಿ ನೋಡುತ್ತಾ ಕೂರುವ ಕ್ರೀಡೆಯಲ್ಲ. ನಾವು, ನೀವು ಇಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಸಾಧನಗಳು, ಅಸ್ತ್ರಗಳಾಗಬೇಕು. ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಆದರೆ ನಾವು ಸ್ವಾತಂತ್ರ್ಯದ ಮೌಲ್ಯ ಮತ್ತು ಇದರ ಶ್ರೇಷ್ಠತೆ ಕಾಪಾಡಲು ಹೋರಾಡಬೇಕು ಎಂದರು.

ಸಂವಿಧಾನದ ಕತೃ ಡಾ.ಬಿ.ಆರ್.ಅಂಬೇಡ್ಕರ್ ಅವರು, “ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ, ಅದು ಜೀವನದ ವಾಹಕ, ಮತ್ತು ಅದರ ಚೈತನ್ಯವು ಯಾವಾಗಲೂ ಯುಗದ ಚೈತನ್ಯವಾಗಿದೆ.” ಎಂದು ಹೇಳಿರುವುದು ಈ ಉದ್ದೇಶಕ್ಕೇ. ನೀವು ಈ ಕ್ಯಾಂಪಸ್ನಿಂದ ಹೊರಡುವಾಗ, ಡಿಗ್ರಿ ಪಡೆದ ಹೆಮ್ಮೆಯನ್ನು ಮಾತ್ರ ಹೊತ್ತುಕೊಂಡು ಹೋಗಬೇಡಿ. ಸ್ವತಂತ್ರ ಭಾರತದ ಹುತಾತ್ಮರ ಕನಸುಗಳನ್ನು ನನಸು ಮಾಡುವ ಸೇನಾನಿಗಳಾಗಿ ಹೊರಡಿ. ಉದ್ಯೋಗಗಳನ್ನು ಸೃಷ್ಟಿಸುವ ಉದ್ಯಮಿಯಾಗಿ, ಔಷಧಿಗಳನ್ನು ಕಂಡುಕೊಳ್ಳುವ ವಿಜ್ಞಾನಿಯಾಗಿ, ಸತ್ಯವನ್ನು ಮಾತನಾಡುವ ಕಲಾವಿದನಾಗಿ ಮತ್ತು ಪ್ರತಿಯೊಬ್ಬ ಭಾರತೀಯನನ್ನು ಘನತೆಯಿಂದ ನಡೆಸಿಕೊಳ್ಳುವ ನಾಗರಿಕನಾಗಿ ಕ್ಯಾಂಪಸ್ಸಿನ ಒಳಗೆ ಮತ್ತು ಹೊರಗೆ ಅತ್ಯುನ್ನತ ನಾಗರಿಕತೆಯನ್ನು ಆಚರಿಸುವ ಸೇನಾನಿಯಾಗಿ ಎಂದು ನಾನು ಹಾರೈಸುತ್ತೇನೆ ಎಂದರು.
ಭಾರತ ಗಣರಾಜ್ಯವಾಗಿ ಸ್ಥಾಪನೆಯಾಗುವ 1950 ರಲ್ಲಿ ಸಾಕ್ಷರತೆ ದೇಶದ ದೊಡ್ಡ ಸವಾಲಾಗಿತ್ತು. 2026 ರಲ್ಲಿ, ಸತ್ಯದ ಸಾಕ್ಷರತೆ ಸವಾಲಾಗಿದೆ. ಡೀಪ್ಫೇಕ್ಗಳ ಕಾಲದಲ್ಲಿ ಸತ್ಯದ ಸೇನಾನಿಗಳಾಗಬೇಕಿದೆ. ನಾವು ಸವಕಲು ಯುವ ಸಮೂಹದಿಂದ ಸಮೃದ್ಧ ಗಣರಾಜ್ಯವನ್ನು ಹೊಂದಲು ಸಾಧ್ಯವಿಲ್ಲ.

ಒಂದು ರಾಷ್ಟ್ರದ ಪ್ರಗತಿಯನ್ನು ಅದರ GDP ಯಿಂದ ಮಾತ್ರ ಅಳೆಯಲಾಗುವುದಿಲ್ಲ, ಬದಲಿಗೆ ಅದು ಅದರ ನಾಗರಿಕನನ್ನು ಘನತೆಯಿಂದ ನಡೆಸಿಕೊಳ್ಳುವ ಮತ್ತು ಮತ್ತು ಪ್ರತಿಯೊಬ್ಬ ಪ್ರಜೆಯೂ ಎಷ್ಟು civilize ಆಗಿದ್ದಾನೆ, ಎಷ್ಟು ನಾಗರಿಕನಾಗಿದ್ದಾನೆ ಎನ್ನವುದರ ಮೇಲೂ ಅಳೆಯಲಾಗುತ್ತದೆ ಎಂದು ವಿವರಿಸಿದರು.
ಆದ್ದರಿಂದ ವಿದ್ಯಾರ್ಥಿಗಳು ಈ ಗಣರಾಜ್ಯ ದಿನದ ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಅರ್ಥಮಾಡಿಕೊಳ್ಳುವುದಷ್ಟೆ ಅಲ್ಲ ಆಚರಿಸಬೇಕು. ಭಾಷೆ, ಧರ್ಮ, ಜಾತಿಗಳ ಭೇದವಿಲ್ಲದೆ ಎಲ್ಲರನ್ನೂ ಗೌರವಿಸುವ ಮೂಲಕ ದೇಶದ ಏಕತೆಯನ್ನು ಎತ್ತಿ ಹಿಡಿಯಬೇಕು. ವಿಶ್ವವಿದ್ಯಾಲಯಗಳು ಕೇವಲ ಪದವಿ ನೀಡುವ ಕೇಂದ್ರಗಳಾಗದೆ, ವಿದ್ಯಾರ್ಥಿಗಳಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ಕಾರ್ಯಾಗಾರಗಳಾಗಬೇಕು ಎಂದು ಎಂದು ಆಶಿಸುತ್ತಾ, ಹಾರೈಸುತ್ತಾ ಮಾತು ಮುಗಿಸುತ್ತೇನೆ.


