HOMEFilm News

ಚಲನಚಿತ್ರಗಳಿಗೆ ಸಮಾಜವನ್ನು ರೂಪಿಸುವ ಶಕ್ತಿ ಇದೆ: ನಟ ಶ್ರೀನಿವಾಸ್ ಪ್ರಭು

ಮೈಸೂರು: ಚಲನಚಿತ್ರಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಪ್ರೇಕ್ಷಕರ ಮನಸ್ಸು ಮತ್ತು ಸಮಾಜದ ದಿಕ್ಕನ್ನು ಪ್ರಭಾವಿಸುವ ಶಕ್ತಿಯುತಮಾಧ್ಯಮಗಳಾಗಿವೆ. ಆದ್ದರಿಂದ ನಿರ್ದೇಶಕರು ತಮ್ಮ ಸೃಜನಶೀಲತೆಯನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಖ್ಯಾತ ಕನ್ನಡ ನಟ ಶ್ರೀನಿವಾಸ್ ಪ್ರಭು ಅಭಿಪ್ರಾಯಪಟ್ಟರು.
ನಗರದ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ದೃಶ್ಯ ಸಂವಹನ ವಿಭಾಗದ ವತಿಯಿಂದ ಆಯೋಜಿಸಲಾದ “ಸಿನೆರಾಮಾ–2026” 8ನೇ ರಾಷ್ಟ್ರ ಮಟ್ಟದ ಕಿರುಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ತಮ್ಮ ಐದು ದಶಕಗಳ ಕಲಾ ಪಯಣವನ್ನು ಸ್ಮರಿಸಿದ ಅವರು, “ಯುವಕರು ದೊಡ್ಡ ಕನಸುಗಳೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಬರುತ್ತಾರೆ. ಆದರೆ ಇದು ಸವಾಲುಗಳಿಂದ ಕೂಡಿದ ಕ್ಷೇತ್ರ. ಪ್ರತಿಯೊಂದು ಹಂತದಲ್ಲೂ ಪರಿಶ್ರಮ, ಸಹನೆ ಮತ್ತು ಧನಾತ್ಮಕ ಮನೋಭಾವ ಅಗತ್ಯ” ಎಂದು ಹೇಳಿದರು.
ನಾಟಕ, ಸಿನಿಮಾ ಹಾಗೂ ಟಿವಿ ಮಾಧ್ಯಮಗಳ ಕುರಿತು ಮಾತನಾಡಿದ ಅವರು, “ನಾಟಕದಲ್ಲಿ ರಿಟೇಕ್ ಎಂಬುದಿಲ್ಲ, ಅದು ನಟನ ನೈಜ ಪರೀಕ್ಷೆ. ಆದರೆ ಸಿನಿಮಾದಲ್ಲಿ ನಿರ್ದೇಶಕನ ದೃಷ್ಟಿಕೋಣವೇ ಪ್ರಮುಖ. ಒಂದು ಕಾಲದಲ್ಲಿ ಟಿವಿ ಮತ್ತು ಸಿನಿಮಾ ಪರಸ್ಪರ ಸ್ಪರ್ಧಿಗಳಾಗಿದ್ದರೂ, ಇಂದು ಅವು ಸಹಬಾಳ್ವೆಯಲ್ಲಿ ಬೆಳೆಯುತ್ತಿವೆ” ಎಂದು ವಿವರಿಸಿದರು.
ಯುವ ನಿರ್ದೇಶಕರು ಪ್ರೇಕ್ಷಕರನ್ನು ತಮ್ಮ ಸ್ನೇಹಿತರಂತೆ ಕಾಣಬೇಕು, ಉಪದೇಶಿಸುವುದಕ್ಕಿಂತ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಫ್ರೆಂಚ್ ತತ್ವಜ್ಞಾನಿ ಆಲ್ಬರ್ಟ್ ಕಾಮೂ ಅವರ ಮಾತುಗಳನ್ನು ಉಲ್ಲೇಖಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಯಾಂಪಸ್ ನಿರ್ದೇಶಕರಾದ ಬ್ರಹ್ಮಚಾರಿ ಅನಂತಾನಂದ ಚೈತನ್ಯ ಅವರು, “ಸಿನಿಮಾ ಅನೇಕ ಕಲಾ ಪ್ರಕಾರಗಳ ಸಂಯೋಜನೆ. ಅದು ಪ್ರೇಕ್ಷಕರ ಭಾವನೆಗಳನ್ನು ಆಳವಾಗಿ ಸ್ಪರ್ಶಿಸುತ್ತದೆ” ಎಂದರು. ನಟನೆಯು ‘ಧ್ಯಾನ ಸ್ಥಿತಿ’ಯಂತೆ ಆಗಬೇಕೆಂಬುದನ್ನು ಒತ್ತಿಹೇಳಿದ ಅವರು, ಏಕಾಗ್ರತೆ ಮತ್ತು ಸೃಜನಶೀಲತೆ ಅತ್ಯಂತ ಮುಖ್ಯವೆಂದು ಹೇಳಿದರು.
ಈ ಕಿರುಚಿತ್ರೋತ್ಸವದಲ್ಲಿ ಓಪನ್ ಕ್ಯಾಟಗರಿ, ಅಮೃತ ಕ್ಯಾಟಗರಿ ಮತ್ತು 60 ಅವರ್ ಚಾಲೆಂಜ್ ಸೇರಿದಂತೆ ಮೂರು ವಿಭಾಗಗಳಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 80 ಕಿರುಚಿತ್ರಗಳು ಭಾಗವಹಿಸಿದ್ದವು. ಆಯ್ಕೆಯಾದ ಚಿತ್ರಗಳನ್ನು ಪ್ರದರ್ಶಿಸಿ, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಜೇತರ ಪಟ್ಟಿ:
ಓಪನ್ ಕ್ಯಾಟಗರಿಯಲ್ಲಿ ಸೆಬಿನ್ ಎಸ್ (ಮನೂಷಿ) ಪ್ರಥಮ, ಪರಾಗ್ ಸಾವಂತ್ (ತುಂಭಾ) ದ್ವಿತೀಯ ಹಾಗೂ ಉದಯ್ ಬಳ್ಳಾಲ್ (ವೀಲ್ಸ್) ತೃತೀಯ ಸ್ಥಾನ ಪಡೆದರು. 60 ಗಂಟೆಗಳ ಚಾಲೆಂಜ್ ವಿಭಾಗದಲ್ಲಿ ಕಾರ್ತಿಕ್ ಕೆ ಕೆ (ವ್ಯೂಹ) ಪ್ರಥಮ ಸ್ಥಾನ ಪಡೆದರೆ, ಅಮೃತ ಕ್ಯಾಟಗರಿಯಲ್ಲಿ ಅಂಕಿತ್ ಭಾರದ್ವಾಜ್ (ಕವಿತಾ) ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಜಿ. ರವೀಂದ್ರನಾಥ್, ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು, ಶೈಕ್ಷಣಿಕ ಸಂಯೋಜಕರಾದ ಡಾ. ರೇಖಾ ಭಟ್ ಹಾಗೂ ದೃಶ್ಯ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ರಮ್ಯಾ ಕೆ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಈ ಕಿರುಚಿತ್ರೋತ್ಸವವು ಯುವ ಚಲನಚಿತ್ರಕಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಿದ್ದು, ಸೃಜನಾತ್ಮಕ ಚಿಂತನೆಗೆ ಹೊಸ ದಿಕ್ಕನ್ನು ನೀಡಿದ ಕಾರ್ಯಕ್ರಮವಾಗಿ ಮೂಡಿಬಂದಿತು.

Leave a Reply