
ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಾಂಸ್ಕೃತಿಕ ರಂಗದಲ್ಲಿ ದೊಡ್ಡ ಹೆಸರು ಪಡೆದಿರುವ ಸಂಸ್ಥೆಯಾಗಿದ್ದು, ಹಲವು ಸಾಧಕರನ್ನು ಗುರುತಿಸುತ್ತಾ ಬರುತ್ತಿದೆ. ಪ್ರತಿಷ್ಠಿತ ಈ ಸಂಸ್ಥೆಯಿಂದ ಕೊಡ ಮಾಡುವ “ಕರ್ನಾಟಕ ರಾಜ್ಯ ರತ್ನ” ರಾಜ್ಯ ಪ್ರಶಸ್ತಿಗೆ ಮೈಸೂರಿನ ಲೇಖಕ, ವಿಮರ್ಶಕ, ಸಂಗ್ರಹಕ ಕಾಳಿಹುಂಡಿ ಕೆ ವಿ ಶಿವಕುಮಾರ್) ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ನಯನ ಸಭಾಂಗಣ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಆವರಣ, ಬೆಂಗಳೂರು ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದಿನಾಂಕ 15.03.2026 ರ ಭಾನುವಾರ ಪ್ರಧಾನ ಮಾಡಲಾಗುವುದು ಎಂದು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಗುಣವಂತ ಮಂಜುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಳಗದ ನಿರ್ದೇಶಕರಾದ ಸತೀಶ್ ಕುಮಾರ್ ಕೆ ಎಸ್ ಅಭಿನಂದಿಸಿದ್ದಾರೆ ಕಾಳಿಹುಂಡಿ ಶಿವಕುಮಾರ್ ರವರು ವೃತ್ತಿಯಲ್ಲಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿದ್ದು, ಪ್ರಸ್ತುತ ಸಾಲಿಗ್ರಾಮ ತಾಲೂಕು ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಸದಭಿರುಚಿಯ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದು, ಲೇಖಕರಾಗಿ, ವಿಮರ್ಶಕರಾಗಿ ನಾಡಿನ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಜೊತೆಗೆ ಕನ್ನಡದ ದಿನ, ವಾರ, ಮಾಸ ಪತ್ರಿಕೆಗಳನ್ನ ಕೊಂಡು ಓದುತ್ತಿದ್ದಾರೆ. ಇದರಿಂದಾಗಿ ಕಳೆದ 30 ವರ್ಷಗಳಿಂದ ಪತ್ರಿಕೆಗಳನ್ನ ಸಂಗ್ರಹಿಸಿ, ಹಲವು ಶೀರ್ಷಿಕೆಗಳ ಮತ್ತು ವಿಷಯಗಳ ಮೂಲಕ ಪ್ರದರ್ಶನ ಮಾಡುತ್ತಾ ಬರುತ್ತಿದ್ದಾರೆ. ಪತ್ರಿಕೆಗಳಲ್ಲಿ ಯೋಗ, ಮೈಸೂರು, ದಸರಾ, ಆಕಾಶವಾಣಿ, ಗಣಪನ ಬಹುರೂಪ, ಕನ್ನಡ ನಾಡು ನುಡಿ, ಪರಂಪರೆ ಮತ್ತು ಇತಿಹಾಸದ ಕುರಿತಾಗಿ ಚಿತ್ರ-ಲೇಖನಗಳನ್ನು ಕೂಡ ಸಂಗ್ರಹಿಸಿ, ಪ್ರದರ್ಶನ ಮಾಡುವುದು ಮುಖ್ಯ ಹವ್ಯಾಸವಾಗಿದೆ. ಆಕಾಶವಾಣಿಯ ಕೇಳುಗರಾಗಿ, ಗಾಯಕರಾಗಿಯೂ ಕೂಡ ಹಲವು ಕಡೆ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಹಲವು ಬಳಗಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಜೊತೆಗೆ ತಮ್ಮದೇ ಆದ “ದೀಪ್ತಿ ಸಂಸ್ಕೃತಿಕ ವೇದಿಕೆ”ಯ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದಾರೆ.





