
ಆನೇಕಲ್, ಮಾರ್ಚ್ 26: ಬೆಂಗಳೂರು ಹೊರವಲಯದಲ್ಲಿ ಕುಟುಂಬ ಕಲಹವು ಭೀಕರ ಅಂತ್ಯ ಕಂಡ ಘಟನೆ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯಲ್ಲಿ ನಡೆದಿದೆ. ತಂಗಿ ಬಾಮೈದನೊಂದಿಗೆ ಪರಾರಿಯಾದ ವಿಷಯಕ್ಕೆ ಕೋಪಗೊಂಡ ಬಾವನೇ ತನ್ನ ಬಾಮೈದನನ್ನು ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮೃತ ವ್ಯಕ್ತಿಯನ್ನು ರಂಜಿತ್ (24) ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಶ್ರೀನಿವಾಸ್ ಎಂದು ಪೊಲೀಸರು ತಿಳಿಸಿದ್ದಾರೆ. ರಂಜಿತ್ ತನ್ನ ಸ್ವಂತ ಅಕ್ಕ ಪವಿತ್ರರನ್ನು ಮದುವೆಯಾದ ಶ್ರೀನಿವಾಸ್ಗೆ ಬಾಮೈದನಾಗಿದ್ದ. ಆದರೆ ನಂತರ ಕುಟುಂಬದಲ್ಲಿ ಅಸಮಾಧಾನಕ್ಕೆ ಕಾರಣವಾದ ಸಂಬಂಧವೇ ಈ ದುರಂತಕ್ಕೆ ಕಾರಣವಾಯಿತು.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಶ್ರೀನಿವಾಸ್ ತಂಗಿ ಕೋಮಲ್ ಮತ್ತು ರಂಜಿತ್ ನಡುವೆ ಆಪ್ತ ಸಂಬಂಧ ಬೆಳೆಯಿತು. ಕೋಮಲ್ನ್ನು ಬೇರೆ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿದ್ದರೂ, ಆಕೆ ತನ್ನ ಗಂಡನನ್ನು ಬಿಟ್ಟು ರಂಜಿತ್ ಜೊತೆ ಪರಾರಿಯಾಗಿದ್ದಳು. ಈ ವಿಷಯದಿಂದ ಎರಡು ಕುಟುಂಬಗಳ ನಡುವೆ ತೀವ್ರ ಗಲಾಟೆಗಳು ನಡೆದಿದ್ದವು.
ಈ ಹಿನ್ನೆಲೆಯಲ್ಲಿ, ಶ್ರೀನಿವಾಸ್ ಹಲವು ಬಾರಿ ರಂಜಿತ್ಗೆ ಎಚ್ಚರಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಪರಿಸ್ಥಿತಿ ತೀವ್ರಗೊಂಡಂತೆ, ಕೋಪವನ್ನು ನಿಯಂತ್ರಿಸಿಕೊಳ್ಳಲಾಗದೇ ಶ್ರೀನಿವಾಸ್ ಸೇಡು ತೀರಿಸಿಕೊಳ್ಳಲು ಮುಂದಾದನು.
ಶುಕ್ರವಾರ ಸಂಜೆ, ರಂಜಿತ್ನ್ನು ಮಾತುಕತೆ ಹೆಸರಿನಲ್ಲಿ ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊ* ಮಾಡಿದ್ದಾನೆ. ಬಳಿಕ ಮೃತದೇಹವನ್ನು ತನ್ನ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ನೇರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಠಾಣೆ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ನೇತೃತ್ವದಲ್ಲಿ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ. ಕೊ* ಗಾಗಿ ಬಳಸಿದ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ.
ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿದಿದೆ.
ಕುಟುಂಬ ಕಲಹ ಮತ್ತು ಭಾವನಾತ್ಮಕ ಆವೇಶ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಈ ಘಟನೆ ಕಹಿ ಉದಾಹರಣೆಯಾಗಿದೆ.





