HOMENews

“ಮಹಿಳಾ ಸಬಲೀಕರಣದಲ್ಲಿ ಕಾನೂನುಗಳ ಪಾತ್ರ”: ಡಾ. ಎಚ್.ಎಲ್. ದಿವ್ಯ

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 27:- ಸಾಲಿಗ್ರಾಮ ​ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಐ ಕ್ಯೂ ಎ ಸಿ ಸಹಯೋಗದಲ್ಲಿ “ಮಹಿಳಾ ಸಬಲೀಕರಣದಲ್ಲಿ ಕಾನೂನುಗಳ ಪಾತ್ರ” ಎಂಬ ವಿಶೇಷ ಉಪನ್ಯಾಸ ಕಾರ್ಯಕಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಎಚ್.ಎಲ್. ದಿವ್ಯರವರು ಮಹಿಳೆಯರು ಕೇವಲ ಶಿಕ್ಷಣ ಪಡೆದರೆ ಸಾಲದು, ಸಂವಿಧಾನ ನೀಡಿರುವ ಕಾನೂನು ಚೌಕಟ್ಟಿನ ಬಗ್ಗೆ ಸ್ಪಷ್ಟ ಅರಿವು ಹೊಂದಿದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸ್ತ್ರೀಯರ ರಕ್ಷಣೆಗಾಗಿ ಇರುವ ವರದಕ್ಷಿಣೆ ನಿಷೇಧ ಕಾಯ್ದೆ, ಲೈಂಗಿಕ ಕಿರುಕುಳ ತಡೆ ಕಾಯ್ದೆ ಹಾಗೂ ಆಸ್ತಿ ಹಕ್ಕಿನ ಬಗ್ಗೆ ಮಹಿಳೆಯರು ಜಾಗೃತರಾಗಬೇಕು ಎಂದು ತಿಳಿಸಿದರು.

ಮಹಿಳೆಯರು ಸಮಾಜದಲ್ಲಿ ಘನತೆ ಮತ್ತು ಗೌರವದಿಂದ ಬದುಕಲು ಅವಕಾಶ ಮಾಡಿಕೊಟ್ಟಾಗ ಮಾತ್ರ ಮಹಿಳಾ ಸಬಲೀಕರಣ ಖಚಿತವಾಗುತ್ತದೆ ಮತ್ತು ದೇಶದ ಅಭಿವೃದ್ಧಿ ಅರ್ಥಪೂರ್ಣವಾಗುತ್ತದೆ, ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ಕಾನೂನು ಅರಿವು ಅತ್ಯಂತ ಪ್ರಬಲ ಅಸ್ತ್ರ ಎಂದು ರಾಜ್ಯಶಾಸ್ತ್ರದ ಮುಖ್ಯಸ್ಥರಾದ ಡಾ. ಎ ಎಸ್ ರಾಜೇಶ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾನೂನು ಅರಿವು ನಮ್ಮ ವಿದ್ಯಾರ್ಥಿನಿಯರಲ್ಲಿ ಹೊಸ ಆತ್ಮವಿಶ್ವಾಸ ತುಂಬಿದೆ. ನಮ್ಮ ಕಾಲೇಜು ವಿದ್ಯಾರ್ಥಿನಿಯರ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಸದಾ ಬದ್ಧವಾಗಿದೆ ಎಂದು ಪ್ರಾಂಶುಪಾಲರಾದ ಡಾ.ಗೋವಿಂದೇಗೌಡ ಕೆ ಇ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಸಿದರು.

ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಯನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಅಧ್ಯಾಪಕರಾದ ಸುರೇಶ್ ಚಲವಾದಿ, ಶ್ರೀನಿವಾಸ ಎಂ, ರಾಜಶೇಖರ, ಕುಮಾರ ಎಚ್ ಎಸ್,ಮಹೇಶ್ ಜಿ ಟಿ, ಮಧು ಎಚ್.ಎಸ್,ಡಾ. ಸುವರ್ಣ, ಡಾ. ಪ್ರತಿಮಾ, ಮಂಜುನಾಥ್, ಡಾ. ಸತ್ಯನಾರಾಯಣ, ಬ್ರಿಜೇಶ್, ಡಾ. ಗಾಯಿತ್ರಮ್ಮ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.