ಮೈಸೂರು ನಗರ ಹಸಿರು ಸಂಪತ್ತಿನ ಸಂರಕ್ಷಣೆಗೆ ಮಹತ್ವದ ಹೆಜ್ಜೆ
“ಮೈಸೂರು ಟ್ರೀ ಆಡಿಟ್ – ಮರಗಳ ಗಣತಿ ಮತ್ತು ವೈಜ್ಞಾನಿಕ ದಾಖಲೀಕರಣ
ಮೈಸೂರು, ಫೆ. 4: ಹೆಚ್ಚುತ್ತಿರುವ ನಗರೀಕರಣ, ರಸ್ತೆ ವಿಸ್ತರಣೆ, ಕಟ್ಟಡ ನಿರ್ಮಾಣ ಹಾಗೂ ಕಾಂಕ್ರೀಟೀಕರಣದಿಂದ ಮೈಸೂರಿನ ಹಸಿರು ಹೊದಿಕೆ ನಿಧಾನವಾಗಿ ಮರೆಯಾಗುತ್ತಿರುವುದವನ್ನು ಮನಗಂಡಿರುವ ಸಾಂಸ್ಕೃತಿಕ ನಗರದ ಪರಿಸರ ಪ್ರೇಮಿಗಳು ಈಗ ನಗರದಲ್ಲಿ ಅಮೂಲ್ಯವಾಗಿರುವ ಮರಗಳ ಸಂಪತ್ತನ್ನು ದಾಖಲಿಸಿ ಸಂರಕ್ಷಿಸುವ ಸಂಕಲ್ಪ ತೊಟ್ಟಿದ್ದಾರೆ.
“ಮೈಸೂರು ಟ್ರೀ ಆಡಿಟ್ 2025–26” ಎಂಬ ಸಮಗ್ರ ಗಣತಿ ಕಾರ್ಯ ಹಾಗೂ ಹಸಿರು ವಲಯ ಪರಿಶೀಲನಾ ಯೋಜನೆಗೆ ಚಾಲನೆ ದೊರೆತಿದೆ.
ಈ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಮರಗಳ ಗಣತಿ ಮಾಡಲು ಜಿಲ್ಲಾಡಳಿತ ಮತ್ತು ಭೇರುಂಡ ಪ್ರತಿಷ್ಠಾನ ಒಪ್ಪಂದಕ್ಕೆ ಸಹಿ ಹಾಕಿದೆ.
ನಂತರ ಮಾತನಾಡಿದ, ಭೇರುಂಡ ಫೌಂಡೇಶನ್ ಅಧ್ಯಕ್ಷರಾದ ತ್ರಿಷಿಕಾ ಕುಮಾರಿ ಒಡೆಯರ್, “ಯಾವುದೇ ನಗರದಲ್ಲಿ ಮರಗಳು ಅತ್ಯಂತ ಪ್ರಮುಖವಾಗಿವೆ. ಇವು ನಮಗೆ ಹಸಿರು ವಲಯ ಹೆಚ್ಚಿಸುವುದಲ್ಲದೇ ನಮಗೆ ಆಮ್ಲಜನಕವನ್ನು ಹೇರಳವಾಗಿ ನೀಡುತ್ತದೆ. ಈ ನಿಟ್ಟಿನಲ್ಲಿ ಮರಗಳ ದತ್ತಾಂಶವು ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕರೂ ಇದರ ಭಾಗವಾಗಬೇಕೆಂದು ಮನವಿ ಮಾಡುತ್ತೇನೆ ಎಂದರು.
ಮರಗಳೇ ಜೀವಾಳ
ಮರಗಳ ಸಂರಕ್ಷಣೆಗೆ ನಮಗೆ ಅವಕಾಶ ನೀಡಿರುವ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮೈಸೂರು ನಗರದ ಮರಗಳ ಗಣತಿ ದತ್ತಾಂಶದ ವರದಿಯನ್ನು ಸಲ್ಲಿಸಲು ಉತ್ಸುಕರಾಗಿದ್ದೇವೆ. ನಗರದಲ್ಲಿ ತುಂಬಿರಲಿ ಹಸಿರು ಹೇರಳ, ಏಕೆಂದರೆ ಮರಗಳೇ ನಮ್ಮ ಜೀವಾಳ ಎಂದು ತ್ರಿಷಿಕಾ ಕುಮಾರಿ ಒಡೆಯರ್ ತಿಳಿಸಿದರು.
ಯೋಜನೆಯ ರೂವಾರಿಗಳು
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಭೇರುಂಡ ಫೌಂಡೇಶನ್ (Bherunda Foundation), ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (CFAL), ಮಂಗಳೂರು ಸಂಸ್ಥೆಯ ಸಹಯೋಗದಲ್ಲಿ ಮುನ್ನಡೆಸುತ್ತಿದ್ದು, ಪರಿಸರ ಸಂಶೋಧನೆ, ವೈಜ್ಞಾನಿಕ ವಿಧಾನಗಳು ಹಾಗೂ ನಾಗರಿಕರನ್ನು ಒಟ್ಟುಗೂಡಿಸುವ ವಿಶಿಷ್ಟ ಪ್ರಯತ್ನವಾಗಿದೆ.
ಏನಿದು ಮರಗಣತಿ?
ಮೈಸೂರಿನ ಪ್ರತಿಯೊಂದು ವಾರ್ಡಿನಲ್ಲಿರುವ ಪ್ರತಿಯೊಂದು ಮರವನ್ನು ವೈಜ್ಞಾನಿಕವಾಗಿ ದಾಖಲಿಸಿ, ಭವಿಷ್ಯದ ನಗರ ಯೋಜನೆ, ಪರಿಸರ ನೀತಿ ಹಾಗೂ ಹಸಿರು ವಲಯ ಅಭಿವೃದ್ಧಿಗೆ ಬಲವಾದ ದತ್ತಾಂಶಗಳ ಆಧಾರ ಒದಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದು ಮೈಸೂರನ್ನು ರಾಷ್ಟ್ರೀಯ ಮಟ್ಟದಲ್ಲಿ ಹಸಿರು ನಗರವನ್ನಾಗಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.
ಟ್ರೀ ಆಡಿಟ್ ಹೇಗೆ?
ಪ್ರತಿಯೊಂದು ಮರವನ್ನು ಜಿಯೊ-ಟ್ಯಾಗ್ ಮಾಡಿ, ಸ್ಥಳಾಧಾರಿತ ನಕ್ಷೆ ಹಾಗೂ ಬೆಳವಣಿಗೆ–ಜೀವರಾಶಿ ಸಹಿತ ದಾಖಲೆ ಮಾಡಲಾಗುವುದು.
ಮರಗಳ ಆರೋಗ್ಯ ಮತ್ತು ವಿಶ್ಲೇಷಣೆ ಮೂಲಕ ರೋಗ, ಕಾಂಕ್ರೀಟೀಕರಣ, ಬೇರು ಹಾನಿ ಮುಂತಾದ ಅಪಾಯಗಳನ್ನು ಗುರುತಿಸಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮರಗಳ ಜಾತಿ, ಎತ್ತರ, ಕಾಂಡದ ವ್ಯಾಸ, ಕ್ಯಾಂಪಿ ವ್ಯಾಪ್ತಿ ಮುಂತಾದ ವಿವರಗಳನ್ನು ದಾಖಲಿಸಿ ವೈಜ್ಞಾನಿಕ ದಾಖಲೀಕರಣ ಮಾಡಲಾಗುವುದು.
ಜೀವ ವೈವಿಧ್ಯ ಮೌಲ್ಯಮಾಪನ: ಶಾನಾನ್ಸ್ ಇಂಡೆಕ್ಸ್ ಬಳಿಕ ಮೈಸೂರಿನ ಮರಗಳ ವೈವಿಧ್ಯವನ್ನು ದಾಖಲಿಸಲಾಗುವುದು.
ಕಾರ್ಬನ್ ಲೆಕ್ಕಾಚಾರ: ನಗರ ಮಟ್ಟದಲ್ಲಿ ಕಾರ್ಬನ್ ಪ್ರಮಾಣದ ಅಂದಾಜು ಲೆಕ್ಕ ಹಾಕಲಾಗುವುದು.
ಮೈಸೂರು ನಗರ ಪಾಲಿಕೆಯ 65 ವಾರ್ಡುಗಳ ಪೈಕಿ 37 ವಾರ್ಡುಗಳಲ್ಲಿ ಸಮೀಕ್ಷೆ ಪ್ರಗತಿಯಲ್ಲಿದೆ. ಈಗಾಗಲೇ 48,000ಕ್ಕೂ ಹೆಚ್ಚು ಮರಗಳ ದಾಖಲೀಕರಣ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. 2026ರ ಮಾರ್ಚ್ 31ರೊಳಗೆ ಎಲ್ಲಾ 65 ವಾರ್ಡುಗಳ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಸಮೀಕ್ಷೆ ಪೂರ್ಣಗೊಂಡ ನಂತರ, 2026ರ ಮಾರ್ಚ್ ನಂತರ ಸಮಗ್ರ ವರದಿ ಹಾಗೂ ಜೀವ ವೈವಿಧ್ಯ ಸೂಚ್ಯಂಕಗಳನ್ನು ಪ್ರಕಟಿಸಲಾಗುವುದು. ಈ ವರದಿ ಮುಂದಿನ ಪೀಳಿಗೆಗೆ ಮೈಸೂರಿನ ಪರಿಸರ ನೀತಿ ಹಾಗೂ ನಗರ ಯೋಜನೆ ರೂಪಿಸಲು ಮಾರ್ಗದರ್ಶಿಯಾಗಲಿದೆ.
ಈ ಹಸಿರು ಅಭಿಯಾನದಲ್ಲಿ ನಾಗರಿಕರು, ಸ್ವಯಂಸೇವಕರು, ಸಂಸ್ಥೆಗಳು ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಸ್ವಯಂಸೇವಕರ ತರಬೇತಿ, ಫೀಲ್ಡ್ ಸಮೀಕ್ಷೆ, ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಮೈಸೂರಿನ ಹಸಿರು ಭವಿಷ್ಯವನ್ನು ಒಟ್ಟಾಗಿ ನಿರ್ಮಿಸೋಣ ಎಂದು ಆಯೋಜಕರು ಮನವಿ ಮಾಡಿದ್ದಾರೆ.
“ಮೈಸೂರು ಟ್ರೀ ಆಡಿಟ್ 2025–26” ಕೇವಲ ಸಮೀಕ್ಷೆಯಲ್ಲ; ಇದು ನಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ಪ್ರಕೃತಿಯ ಮೇಲಿಗೆ ನಮ್ಮ ಹೊಣೆಗಾರಿಕೆ ಪ್ರತಿಜ್ಞೆ” ಎಂದು ಆಯೋಜಕರು ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಆಯುಕ್ತರಾದ ಶೀಕ್ ತನ್ವೀರ್ ಆಸಿಫ್, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಸಾಮಾಜಿಕ ಕಾರ್ಯಕರ್ತರು, ಪರಿಸರ ಪ್ರೇಮಿ, ಸಂಚಾಲಕರೂ ಆಗಿರುವ ನಿಖಿಲೇಶ್ ಎಂ, ಸಿಎಎಫ್ಎಲ್ನ ಪ್ರತಿನಿಧಿ ಶಾಂತ ಗೌಡ ಹಾಜರಿದ್ದರು










