ಅಪ್ಪನ ಮೇಲಿನ ಕೋಪಕ್ಕೆ ನಾಲ್ಕರ ಮಗುವಿನೊಂದಿಗೆ ವಿಕೃತಿ ಕಾಲು ಹಿಡಿದು ತಲೆಯನ್ನ ರಸ್ತೆಗೆ ಚಚ್ಚಿದ ಕಿರಾತಕ
ಮುಂಬೈ :- ಮನುಷ್ಯತ್ವವೇ ನಡುಗಿಸುವ ಘಟನೆಯೊಂದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಬೆಳಕಿಗೆ ಬಂದಿದ್ದು, ನಾಲ್ಕು ವರ್ಷದ ಪುಟ್ಟ ಮಗುವಿನ ಮೇಲೆ ನಡೆದ ಅಮಾನುಷ ಕೃತ್ಯ ದೇಶವನ್ನೇ ಬೆಚ್ಚಿಬೀಳಿಸಿದೆ.
ಮುಂಬೈಯ ಮೀರಾ ರಸ್ತೆ ಪ್ರದೇಶದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಆರೋಪಿಯನ್ನು ಸಂದೀಪ್ ಪವಾರ್ ಎಂದು ಗುರುತಿಸಲಾಗಿದ್ದು, ಆತ ಮಗುವಿನ ತಂದೆಯೊಂದಿಗೆ ನಡೆದ ವೈಯಕ್ತಿಕ ಜಗಳದ ಸಿಟ್ಟನ್ನು ನಿರಪರಾಧ ಮಗುವಿನ ಮೇಲೆ ಹೊರಹಾಕಿದ್ದಾನೆ.
ಘಟನೆ ಸಂಭವಿಸಿದ ವೇಳೆ ನಾಲ್ಕು ವರ್ಷದ ಬಾಲಕ ಇತರ ಮಕ್ಕಳೊಂದಿಗೆ ಆಟವಾಡುತ್ತಾ, ಹತ್ತಿರದಲ್ಲಿದ್ದ ಆಟೋದಲ್ಲಿ ಕುಳಿತಿದ್ದನು. ಇದೇ ವೇಳೆ ಆರೋಪಿಯು ಸ್ಥಳಕ್ಕೆ ಬಂದು, ಕೋಪದ ತಲ್ಲಣದಲ್ಲೇ ಬಾಲಕನನ್ನು ಗುರಿಯಾಗಿಸಿಕೊಂಡಿದ್ದಾನೆ. ಏಕಾಏಕಿ ಮಗುವಿನ ಎರಡು ಕಾಲುಗಳನ್ನು ಹಿಡಿದು ಆಟೋದಿಂದ ಕೆಳಕ್ಕೆ ಎಳೆದು ತಂದಿದ್ದಾನೆ.
ಅದಾದ ನಂತರ ನಡೆದ ಕ್ರೂರತೆ ಕಣ್ಣಾರೆ ನೋಡಲು ಸಹ ಅಸಹನೀಯ. ಆರೋಪಿಯು ಮಗುವನ್ನು ಬಟ್ಟೆ ಒಗೆದಂತೆ ಎತ್ತಿ, ಅವನ ತಲೆಯನ್ನು ರಸ್ತೆ ಮೇಲೆ ಹಲವು ಬಾರಿ ಬಡಿದಿದ್ದಾನೆ. ಇದರಿಂದ ಮಗುವಿಗೆ ಗಂಭೀರ ಗಾಯಗಳಾಗಿವೆ. ಅಲ್ಲೇ ನಿಲ್ಲದೆ, ಆತ ಮಗುವನ್ನು ಕಟ್ಟಡದೊಳಗೆ ಕೊಂಡೊಯ್ದು, ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಭೀಕರ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ದೃಶ್ಯಗಳು ನೋಡಿದ ಜನರಲ್ಲಿ ಆಕ್ರೋಶ ಮತ್ತು ಆಘಾತ ಮೂಡಿಸಿದೆ.
ಗಂಭೀರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಮೀರಾ ರಸ್ತೆಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮಗುವಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಬಹಿರಂಗವಾದ ಬಳಿಕ ಸ್ಥಳೀಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತಂದೆಯ ಮೇಲಿನ ಸಿಟ್ಟನ್ನು ಮಗುವಿನ ಮೇಲೆ ಹೊರಹಾಕುವುದು ಯಾವ ಮಾನವೀಯತೆಯೂ ಅಲ್ಲ” ಎಂದು ಜನರು ಖಂಡಿಸಿದ್ದಾರೆ.
ಒಬ್ಬನ ಕೋಪ, ನಿರಪರಾಧ ಜೀವದ ಮೇಲೆ ಬಿದ್ದಾಗ ಅದು ಕೇವಲ ಹಿಂಸೆ ಅಲ್ಲ — ಮಾನವೀಯತೆಯ ಸೋಲು. ಈ ಘಟನೆ ಮತ್ತೊಮ್ಮೆ ಸಮಾಜದಲ್ಲಿ ಕ್ರೋಧ ನಿಯಂತ್ರಣ ಮತ್ತು ಮಾನವೀಯ ಮೌಲ್ಯಗಳ ಅಗತ್ಯತೆಯನ್ನು ನೆನಪಿಸಿದೆ.





























